Bible 2 India Mobile
[VER] : [KANNADA]     [PL]  [PB] 
 <<  Matthew 17 >> 

1ಆರು ದಿನಗಳಾದ ಮೇಲೆ ಯೇಸು ಪೇತ್ರನನ್ನೂ ಯಾಕೋಬನನ್ನೂ ಅವನ ತಮ್ಮ ಯೋಹಾನನನ್ನೂ ಮಾತ್ರ ಏಕಾಂತವಾಗಿ ಕರೆದುಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು.

2ಅಲ್ಲಿ ಆತನು ಅವರ ಮುಂದೆ ರೂಪಾಂತರಗೊಂಡನು. ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು. ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು.

3ಇಗೋ, ಮೋಶೆಯೂ ಎಲೀಯನೂ ಆತನ ಸಂಗಡ ಮಾತನಾಡುತ್ತಾ ಅವರಿಗೆ ಕಾಣಿಸಿಕೊಂಡರು.

4ಆಗ ಪೇತ್ರನು ಯೇಸುವಿಗೆ, <<ಕರ್ತನೇ, ನಾವು ಇಲ್ಲೇ ಇರುವುದು ಒಳ್ಳೆಯದು. ನೀನು ಬಯಸುವುದಾದರೆ, ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು. ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು>> ಎಂದು ಹೇಳಿದನು.

5ಆತನು ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೋಡವು ಬಂದು ಅವರ ಮೇಲೆ ಕವಿಯಿತು. ಇದಲ್ಲದೆ ಆ ಮೋಡದೊಳಗಿನಿಂದ <<ಈತನು ಪ್ರಿಯನಾಗಿರುವ ನನ್ನ ಮಗನು ಈತನನ್ನು ನಾನು ಮೆಚ್ಚಿದ್ದೇನೆ ಈತನಿಗೆ ಕಿವಿಗೊಡಿರಿ>> ಎಂದು ಹೇಳುವ ವಾಣಿವುಂಟಾಯಿತು.

6ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಬೋರಲು ಬಿದ್ದರು.

7ಆದರೆ ಯೇಸು ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, ಏಳಿರಿ ಹೆದರಬೇಡಿರಿ ಅಂದನು.

8ಅವರು ಕಣ್ಣೆತ್ತಿ ಮೇಲೆ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.

9ಅವರು ಆ ಬೆಟ್ಟದಿಂದ ಇಳಿದು ಬರುತ್ತಿರುವಾಗ ಯೇಸು ಅವರಿಗೆ, <<ಈ ದರ್ಶನದ ಬಗ್ಗೆ ಮನುಷ್ಯಕುಮಾರನು ಸತ್ತು ಜೀವಿತನಾಗಿ ಎಬ್ಬಿಸಲ್ಪಡುವ ತನಕ ಯಾರಿಗೂ ಹೇಳಬಾರದೆಂದು>> ಆಜ್ಞಾಪಿಸಿದನು.

10ಆಗ ಆತನ ಶಿಷ್ಯರು, <<ಎಲೀಯನು ಮೊದಲು ಬರುವುದು ಅವಶ್ಯವೆಂಬುದಾಗಿ ಶಾಸ್ತ್ರಿಗಳು ಹೇಳುತ್ತಾರಲ್ಲಾ ಏಕೆ?>> ಎಂದು ಆತನನ್ನು ಕೇಳಿದರು.

11ಯೇಸು ಅವರಿಗ,<<ಎಲೀಯನು ಮೊದಲು ಬರುವುದು ನಿಜ. ಬಂದು ಎಲ್ಲವನ್ನು ಪುನಃ ಸ್ಥಾಪಿಸುವನು.

12ಆದರೆ ನಾನು ನಿಮಗೆ ಹೇಳುತ್ತೇನೆ, ಎಲೀಯನು ಬಂದಾಯಿತು, ಆದರೆ ಜನರು ಅವನನ್ನು ಗುರುತಿಸದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದರು. ಅದರಂತೆಯೇ ಮನುಷ್ಯಕುಮಾರನು ಸಹ ಅವರಿಂದ ಹಿಂಸೆಗೊಳಗಾಗುವನು>> ಎಂದು ಉತ್ತರ ಕೊಟ್ಟನು.

13ಸ್ನಾನಿಕನಾದ ಯೋಹಾನನ ವಿಷಯವಾಗಿ ತಮ್ಮೊಂದಿಗೆ ಮಾತನಾಡಿದನೆಂದು ಆಗ ಶಿಷ್ಯರು ತಿಳಿದುಕೊಂಡರು.

14ಅವರು ಜನರ ಗುಂಪಿನ ಬಳಿಗೆ ಬಂದಾಗ ಒಬ್ಬನು ಆತನ ಹತ್ತಿರಕ್ಕೆ ಬಂದು ಆತನ ಮುಂದೆ ಮೊಣಕಾಲೂರಿ,

15<<ಕರ್ತನೇ ನನ್ನ ಮಗನನ್ನು ಕರುಣಿಸು, ಅವನು ಮೂರ್ಛೆರೋಗದಿಂದ ಬಹಳ ಕಷ್ಟಪಡುತ್ತಿದ್ದಾನೆ. ಅನೇಕ ಬಾರಿ ಬೆಂಕಿಯಲ್ಲಿಯೂ, ನೀರಿನಲ್ಲಿಯೂ ಬೀಳುತ್ತಾನೆ.

16ಅವನನ್ನು ನಿನ್ನ ಶಿಷ್ಯರ ಬಳಿಗೆ ಕರತಂದಿದ್ದೆನು. ಆದರೆ ಗುಣಪಡಿಸುವುದಕ್ಕೆ ಅವರಿಂದ ಆಗಲಿಲ್ಲ>> ಅಂದನು.

17ಅದಕ್ಕೆ ಯೇಸು, <<ಎಲಾ ಅಪನಂಬಿಕೆಯುಳ್ಳ ವಕ್ರಬುದ್ಧಿಯುಳ್ಳ ಸಂತಾನವೇ, ನಾನು ಇನ್ನೆಷ್ಟು ಕಾಲ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ಇಲ್ಲಿ ನನ್ನ ಬಳಿಗೆ ಕರತನ್ನಿರಿ>> ಅಂದನು.

18ಯೇಸು ಅವನ ಮೇಲಿದ್ದ ದೆವ್ವವನ್ನು ಗದರಿಸಲು ಆ ದೆವ್ವವು ಅವನನ್ನು ಬಿಟ್ಟುಹೋಯಿತು. ಆ ಕ್ಷಣವೇ ಆ ಹುಡುಗನಿಗೆ ಸ್ವಸ್ಥವಾಯಿತು.

19ತರುವಾಯ ಶಿಷ್ಯರು ಏಕಾಂತವಾಗಿ ಯೇಸುವಿನ ಬಳಿಗೆ ಬಂದು, <<ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಏಕೆ ಆಗಲಿಲ್ಲವೆಂದು ಕೇಳಿದರು?>>

20ಆತನು ಅವರಿಗೆ, <<ನಿಮ್ಮ ಅಪನಂಬಿಕೆಯಿಂದಲೇ ಆಗಲಿಲ್ಲ. ಸಾಸಿವೇ ಕಾಳಿನಷ್ಟು ನಂಬಿಕೆ ನಿಮಗೆ ಇರುವುದಾದರೆ,

21ನೀವು ಈ ಬೆಟ್ಟಕ್ಕೆ, <ಇಲ್ಲಿಂದ ಅಲ್ಲಿಗೆ ಸರಿದು ಹೋಗು> ಎಂದು ಹೇಳಿದರೂ ಅದು ಹೋಗುವುದು ಮತ್ತು ನಿಮಗೆ ಅಸಾಧ್ಯವಾದುದು ಒಂದೂ ಇರುವುದಿಲ್ಲ>> ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆತನು, ಈ ರೀತಿಯ ದೆವ್ವಗಳು ಪ್ರಾರ್ಥನೆಯಿಂದಲೇ ಹೊರತು ಬೇರೆ ಯಾವರೀತಿಯಿಂದಲೂ ಇವುಗಳು ಬಿಟ್ಟು ಹೋಗುವುದಿಲ್ಲವೆಂದು ಅವರಿಗೆ ಹೇಳಿದನು.

22ಅವರು ಗಲಿಲಾಯದಲ್ಲಿ ವಾಸಿಸುತ್ತಿರುವಾಗಲೇ ಯೇಸು ಶಿಷ್ಯರಿಗೆ, <<ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಲ್ಪಡುವನು.

23ಅವರು ಆತನನ್ನು ಕೊಲ್ಲುವರು, ಆದರೆ ಸತ್ತು ಮೂರನೆಯ ದಿನದಲ್ಲಿ ಆತನು ಜೀವಿತನಾಗಿ ಎಬ್ಬಿಸಲ್ಪಡುವನು>> ಎಂದು ಹೇಳಿದನು. ಅದನ್ನು ಕೇಳಿ ಅವರು ಬಹಳ ದುಃಖಪಟ್ಟರು.

24ಅವರು ಕಪೆರ್ನೌಮಿಗೆ ಬಂದಾಗ ದೇವಾಲಯಕ್ಕಾಗಿ ತೆರಿಗೆಯನ್ನು ಸಂಗ್ರಹಿಸುವವರು ಪೇತ್ರನ ಬಳಿಗೆ ಬಂದು, <<ನಿಮ್ಮ ಗುರುವು ದೇವಾಲಯದ ತೆರಿಗೆಯನ್ನು ಕಟ್ಟುವುದಿಲ್ಲವೇ>> ಎಂದು ಕೇಳಲು, <<ಹೌದು ಕಟ್ಟುವನು>> ಅಂದನು.

25ಪೇತ್ರನು ಮನೆಯೊಳಗೆ ಬಂದಾಗ, ಅವನು ಬಾಯಿ ತೆರೆದು ಮಾತನಾಡುವ ಮೊದಲೇ, ಯೇಸು ಅವನುಗೆ, <<ಸೀಮೋನನೇ, ನಿನಗೆ ಹೇಗೆ ತೋರುತ್ತದೆ? ಭೂಲೋಕದ ಅರಸರು ಕಂದಾಯವನ್ನಾಗಲಿ ತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ತಮ್ಮ ಪ್ರಜೆಗಳಿಂದಲೋ ಅಥವಾ ಪರರಿಂದಲೋ?>> ಎಂದು ಕೇಳಿದನು.

26ಅವನು, <<ಪರರಿಂದ>> ಎಂದು ಉತ್ತರ ಕೊಡಲು, ಯೇಸು ಅವನಿಗೆ, <<ಹಾಗಾದರೆ ಪ್ರಜೆಗಳು ಅದ್ದನ್ನು ಕೊಡಬೇಕಾಗಿಲ್ಲವೇ.

27ಆದರೂ ನಾವು ಅವರಿಗೆ ಅಡ್ಡಿಯಾಗದಂತೆ, ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕಿ ಮೊದಲು ಸಿಕ್ಕುವ ಮೀನನ್ನು ಹಿಡಿದು, ಅದರ ಬಾಯಿ ತೆರೆದು ನೋಡು ಅದರಲ್ಲಿ ಒಂದು ಬೆಳ್ಳಿ ನಾಣ್ಯ ಸಿಕ್ಕುವುದು. ಅದನ್ನು ತೆಗೆದುಕೊಂಡು ನನಗೋಸ್ಕರ ಮತ್ತು ನಿನಗೋಸ್ಕರ ತೆರಿಗೆ ಹಣ ಕೊಡು>> ಎಂದು ಹೇಳಿದನು.


  Share Facebook  |  Share Twitter

 <<  Matthew 17 >> 


Bible2india.com
© 2010-2024
Help
Dual Panel

Laporan Masalah/Saran