Bible 2 India Mobile
[VER] : [KANNADA]     [PL]  [PB] 
 <<  Luke 12 >> 

1ಇಷ್ಟರಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ತುಳಿಯುವಷ್ಟು ಕೂಡಿಬಂದಿರಲಾಗಿ ಯೇಸುವು ಮೊದಲು ತನ್ನ ಶಿಷ್ಯರಿಗೆ ಉಪದೇಶಿಸಿ ಹೇಳಿದ್ದೇನೆಂದರೆ, “ಫರಿಸಾಯರ ‘ಹುಳಿಹಿಟ್ಟಿನ’ ಬಗ್ಗೆ, ಅಂದರೆ ಅವರ ಕಪಟತನದ ವಿಷಯದಲ್ಲಿ ಜಾಗರೂಕರಾಗಿರಿ.”

2ಮರೆಯಾಗಿರುವ ಯಾವದೂ ವ್ಯಕ್ತವಾಗದೆ ಇರುವುದಿಲ್ಲ. ಪ್ರಕಟಗೊಳ್ಳದ ರಹಸ್ಯವೂ ಇಲ್ಲ.

3ಹೀಗಿರುವದರಿಂದ ನೀವು ಕತ್ತಲಲ್ಲಿ ಹೇಳಿದಂಥದು ಬೆಳಕಿನಲ್ಲಿ ಕೇಳಲಾಗುವದು. ಮತ್ತು ನೀವು ಕೊಣೆಗಳೊಳಗೆ ಪಿಸುಗುಟ್ಟಿದ್ದು ಮಾಳಿಗೆಗಳ ಮೇಲೆ ಸಾರಲಾಗುವದು.

4ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ - ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು.

5ಆದರೆ ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ. ಸತ್ತ ಮೇಲೆ ನರಕದೊಳಗೆ ದಬ್ಬಲು ಅಧಿಕಾರವುಳ್ಳಾತನಿಗೆ ಹೆದರಬೇಕು. ಹೌದು ಆತನಿಗೇ ಭಯಪಡಬೇಕೆಂದು ನಿಮಗೆ ಒತ್ತಿಹೇಳುತ್ತೇನೆ.

6ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲ? ಆದಾಗ್ಯೂ ಅವುಗಳಲ್ಲಿ ಒಂದನ್ನೂ ದೇವರು ಮರೆತುಹೋಗುವುದಿಲ್ಲ.

7ಅಷ್ಟುಮಾತ್ರವಲ್ಲ, ನಿಮ್ಮ ತಲೆ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.

8ನಾನು ನಿಮಗೆ ಹೇಳುತ್ತೇನೆ, ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಮನುಷ್ಯಕುಮಾರನು ಸಹ ಆ ವ್ಯಕ್ತಿಯನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು,

9ಆದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನಲ್ಲವೆಂದು ಹೇಳುವೆನು.

10ಮನುಷ್ಯಕುಮಾರನ ವಿರುದ್ಧ ಮಾತಾಡುವ ಪ್ರತಿಯೊಬ್ಬನಿಗೆ ಕ್ಷಮಾಪಣೆಯಾಗುವದು. ಆದರೆ ಪವಿತ್ರಾತ್ಮನನ್ನು ದೂಷಿಸಿದವನಿಗೆ ಕ್ಷಮೆಯೇ ದೊರಕದು.

11ಅವರು ನಿಮ್ಮನ್ನು ಪ್ರಾರ್ಥನ ಮಂದಿರಗಳಿಗೂ ಸಭಾಮಂದಿರಗಳ ಅಧಿಕಾರಿಗಳ ಎದುರಿಗೂ ಅಧಿಪತಿಗಳ ಎದುರಿಗೂ ಹಿಡುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರ ಕೊಡಬೇಕು? ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ.

12ಯಾಕೆಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು ಅಂದನು.

13ಆಗ ಜನರಲ್ಲಿ ಒಬ್ಬನು - ಭೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡುವಂತೆ ನನ್ನ ಅಣ್ಣನಿಗೆ ಹೇಳು ಎಂದು ಯೇಸುವನ್ನು ಕೇಳಿಕೊಳ್ಳಲು

14ಆತನು - ಮನುಷ್ಯನೇ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು ಎಂದು ಅವನನ್ನು ಕೇಳಿ,

15ಜನರಿಗೆ – ಎಲ್ಲಾ ದುರಾಸೆಗಳಿಂದಲು ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ ಎಂದು ಹೇಳಿ ಒಂದು ಸಾಮ್ಯವನ್ನು ಹೇಳಿದನು.

16ಅದೇನಂದರೆ ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆ ಬೆಳೆಯಿತು.

17ಆಗ ಅವನು ತನ್ನೊಳಗೆ - ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲವಲ್ಲಾ ಎಂದು ಆಲೋಚಿಸಿ - ಒಂದು ಕೆಲಸ ಮಾಡುತ್ತೇನೆ.

18ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನುಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ಧವಸಧಾನ್ಯಗಳನ್ನೂ ಸರಕುಗಳನ್ನು ತುಂಬಿಟ್ಟು.

19ನನ್ನ ಜೀವಾತ್ಮಕ್ಕೆ - ಜೀವವೇ, ಅನೇಕ ವರುಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ; ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು ಅಂದುಕೊಂಡನು.

20ಆದರೆ ದೇವರು ಅವನಿಗೆ - ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವದು ಯಾರಿಗಾಗುವದು ಎಂದು ಹೇಳಿದನು.

21ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವಯ೯ವಂತನಾಗದೆ ಇರುವವನು ಅವನಂತಯೇ ಇದ್ದಾನೆ ಅಂದನು.

22ಇದಲ್ಲದೆ ಯೇಸುವು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - ಈ ಕಾರಣದಿಂದ ಪ್ರಾಣಧಾರಣೆಗೆ ಏನು ಊಟ ಮಾಡಬೇಕು? ದೇಹ ರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬದಾಗಿ ನಿಮಗೆ ಹೇಳುತ್ತೇನೆ.

23ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ದೇಹವು ಮೇಲಾದದು.

24ಕಾಗೆಗಳನ್ನು ಗಮನಿಸಿರಿ. ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಅದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ.

25ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಒಂದು ಮೊಳದಷ್ಟು ಉದ್ದವಾದರೂ ಎಳೆದು ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು?

26ಇಂಥ ಅಲ್ಪ ಕಾರ್ಯಗಳನ್ನು ಮಾಡಲು ನೀವು ಆಸಕ್ತರಾಗಿರಲಾಗಿ ಉಳಿದ ವಿಷಯದಲ್ಲಿ ಚಿಂತೆಮಾಡುವದೇಕೆ?

27ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಗಮನಿಸಿ ನೋಡಿರಿ; ಅವು ದುಡಿಯುವುದಿಲ್ಲ, ನೂಲುವದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವ ವೈಭವದಲ್ಲಿ ಇದ್ದಾಗಲೂ, ಈ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪುಗಳನ್ನು ಧರಿಸಲಿಲ್ಲವೆಂದು ನಿಮಗೆ ಹೇಳುತ್ತೇನೆ.

28ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು.

29ಏನು ಊಟ ಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಟ್ಟು ಚಿಂತಿಸಬೇಡಿರಿ.

30ಇವೆಲ್ಲವುಗಳ ಕುರಿತು ಇಹಲೋಕದ ಜನಗಳು ಅಲೆದಾಡುತ್ತಾರೆ. ಇವು ನಿಮಗೆ ಅವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ.

31ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ. ಇದರ ಕೂಡ ಅವೂ ನಿಮಗೆ ದೊರಕುವದು.

32ಚಿಕ್ಕ ಹಿಂಡೇ, ಹೇದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.

33ನಿಮಗಿರುವದನ್ನು ಮಾರಿಬಿಟ್ಟು ದಾನಾಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ; ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.

34ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸು ಇರುವದಷ್ಟೇ.

35ನಿಮ್ಮ ನಡುಗಳು ಕಟ್ಟಿರಲಿ. ನಿಮ್ಮ ದೀಪಗಳು ಆರದಂತೆ ಉರಿಯುತ್ತಾ ಇರಲಿ.

36ನೀವಂತೂ ತಟ್ಟಿದ ಕೂಡಲೆ ಬಾಗಿಲನ್ನು ತೆರೆಯಲು ಸಿದ್ಧರಾಗಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಯಾವಾಗ ಮದುವೆ ಔತಣ ಮುಗಿಸಿಕೊಂಡು ಹಿಂತಿರುಗುವನೋ ಎಂದು ಕಾಯುವ ದಾಸರಂತೆ ಇರಿ.

37ಯಜಮಾನನು ಬಂದು ಯಾವ ಆಳು ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು. ಏಕೆಂದರೆ, ಯಜಮಾನನೇ ನಡುಕಟ್ಟಿಕೊಂಡು ಆ ಆಳುಗಳನ್ನು ಊಟಕ್ಕೆ ಕೂರಿಸಿ, ಹತ್ತಿರಕ್ಕೆ ಬಂದು ಅವರಿಗೆ ಊಟವನ್ನು ಬಡಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

38ಯಜಮಾನನು ಬರುವಾಗ ನಡು ರಾತ್ರಿಆಗಿರಲಿ, ಮುಂಜಾವವಾಗಿರಲಿ, ಆತನು ಬರುವಾಗ ಎಚ್ಚರವಾಗಿ ಕಾಣಿಸಿಕೊಳ್ಳುವ ಸೇವಕರು ಧನ್ಯರು.

39ಕಳ್ಳನು ಬರುವ ಗಳಿಗೆಯು ಮನೆ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಾ ಹಾಕಗೊಡಿಸುತ್ತಿರಲಿಲ್ಲವೆಂದು ತಿಳುಕೊಳ್ಳಿರಿ.

40ನೀವು ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ ಅಂದನು.

41ಆಗ ಪೇತ್ರನು - ಸ್ವಾಮಿ, ನೀನು ಈ ಸಾಮ್ಯವು ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ? ಎಂದು ಕೇಳಲು.

42ಯೇಸು ಸ್ವಾಮಿಯು ಹೇಳಿದ್ದೇನಂದರೆ - ಹೊತ್ತು ಹೊತ್ತಿಗೆ ಅವಶ್ಯಕತೆಗೆ ಬೇಕಾದದ್ದನ್ನು ಅಳೆದು ಕೊಡುವುದಕ್ಕಾಗಿ ಯಜಮಾನನು ತನ್ನ ಮನೆಯವರ ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆದ ಮನೆವಾರ್ತೆಯವನು ಯಾರು?

43ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು.

44ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಕಾರಿಯಾಗಿ ನೇಮಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

45ಆದರೆ ಆ ಆಳು - ನನ್ನ ಯಜಮಾನನು ಬರುವುದಕ್ಕೆ ತಡವಾಗುತ್ತದೆಯೆಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವದಕ್ಕೂ ತೊಂದರೆಕೊಡುವುದಕ್ಕೂ ಮತ್ತು ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ,

46ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾದ ಚಿತ್ರಹಿಂಸೆಗೂ ಅಪನಂಬಿಗಸ್ತರಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು.

47ತನ್ನ ಯಜಮಾನನ ಇಷ್ಟಾರ್ಥವನ್ನು ಆಳು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಅವನ ಚಿತ್ತಕ್ಕನುಸಾರ ನಡೆಯದಿದ್ದರೆ ಕಠಿಣವಾದ ಶಿಕ್ಷೆಗೆ ಗುರಿಯಾಗುವನು.

48ತಿಳಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಯಾವನಿಗೆ ಬಹಳವಾಗಿ ಕೊಡಲ್ಪಟ್ಟಿದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು. ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳಲ್ಪಡುವುದು.

49ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕಬೇಕೆಂದು ಬಂದೆನು. ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ.

50ಆದರೆ ನಾನು ಹೊಂದತಕ್ಕ ದೀಕ್ಷಾಸ್ನಾನ ಒಂದುಂಟು, ಅದು ನೆರವೇರುವ ತನಕ ನನಗೆ ನೆಮ್ಮದಿಯಿಲ್ಲ.

51ನಾನು ಭೂಮಿಯಲ್ಲಿ ಸಮಾಧಾನವನ್ನುಂಟು ಮಾಡುವದಕ್ಕೆ ಬಂದೆನೆಂದು ಭಾವಿಸುತ್ತೀರೋ? ಅದಕ್ಕೆ ಬರಲಿಲ್ಲ, ಭಿನ್ನಭೇಧಗಳನ್ನು ಉಂಟುಮಾಡುವದಕ್ಕೆ ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ.

52ಹೇಗೆಂದರೆ - ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರೂ ಏಳುವರು.

53ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು. ಅತ್ತೆಗೆ ವಿರೋಧವಾಗಿ ಸೊಸೆಯು ಪರಸ್ಪರ ಭಿನ್ನಭೇಧವುಳ್ಳವರಾಗಿ ವಿಂಗಡಿಸಿ ಹೋಗುವರು, ಅಂದನು.

54ಇದಲ್ಲದೆ ಯೇಸುವು ಎಲ್ಲಜನರಿಗೂ ಹೇಳಿದ್ದೇನಂದರೆ - ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೆ ಮಳೆ ಬರುತ್ತದೆ ಅನ್ನುತ್ತೀರಿ; ಹಾಗೆಯೇ ಆಗುತ್ತದೆ.

55ದಕ್ಷಿಣ ದಿಕ್ಕಿನಿಂದ ಗಾಳಿ ಬೀಸಲಾಗಿ ಸೆಕೆ ಹುಟ್ಟುತ್ತದೆ ಅನ್ನುತ್ತೀರಿ. ಅದೂ ಹಾಗೆಯೇ ಆಗುತ್ತದೆ.

56ಕಪಟಿಗಳೆ, ನೀವು ಭೂಮ್ಯಾಕಾಶಗಳ ಲಕ್ಷಣಗಳನ್ನು ಸರಿಯಾಗಿ ಅರಿತುಕೊಳ್ಳಬಲ್ಲಿರಿ; ಆದರೆ ಪ್ರಸ್ತುತ ಕಾಲವನ್ನು ವಿವರಿಸುವ ಸಾಮರ್ಥ್ಯವನ್ನು ಹೊಂದದೆಹೊಗಿದ್ದಿರಾ?

57ಇದಲ್ಲದೆ ನ್ಯಾಯವಾದದ್ದು ಯಾವುದೆಂದು ನೀವೇ ಯಾಕೆ ತೀರ್ಮಾನ ಮಾಡಿಕೊಳ್ಳುವದಿಲ್ಲ?

58ನೀನು ವಾದಿಯ ಸಂಗಡ ನ್ಯಾಯಾಧಿಪತಿಯ ಬಳಿಗೆ ಹೋಗುತ್ತಿರುವಾಗ ದಾರಿಯಲ್ಲಿಯೇ ಜಗಳವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಎಳಕೊಂಡು ಹೋದಾನು. ನ್ಯಾಯಾಧಿಪತಿಯು ನಿನ್ನನ್ನು ಸೆರೆ ಯಜಮಾನನ ವಶಕ್ಕೆ ಒಪ್ಪಿಸಾನು. ಸೆರೆಯಜಮಾನನು ನಿನ್ನನ್ನು ಸೆರೆಮನೆಯಲ್ಲಿ ಹಾಕಿಯಾನು.

59ನೀನು ಕೊನೆಯ ಕಾಸನ್ನು ಕೊಟ್ಟು ತೀರಿಸುವವರೆಗೂ ಅಲ್ಲಿಂದ ಹೊರ ಬರುವುದಕ್ಕೆ ಸಾಧ್ಯವಿಲ್ಲವೆಂದು ನಾನು ನಿನಗೆ ಒತ್ತಿ ಹೇಳುತ್ತೇನೆ, ಅಂದನು.


  Share Facebook  |  Share Twitter

 <<  Luke 12 >> 


Bible2india.com
© 2010-2024
Help
Dual Panel

Laporan Masalah/Saran