Bible 2 India Mobile
[VER] : [KANNADA]     [PL]  [PB] 
 <<  Proverbs 22 >> 

1ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ, ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ.

2ಬಡವರು ಮತ್ತು ಸಿರಿವಂತರು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರನ್ನೆಲ್ಲಾ ಸೃಷ್ಟಿಸಿದನು.

3ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.

4ಧನ, ಮಾನ ಮತ್ತು ಜೀವಗಳು ದೀನಭಾವಕ್ಕೂ, ಯೆಹೋವನ ಭಯಕ್ಕೂ ಫಲ.

5ವಕ್ರಬುದ್ಧಿಯುಳ್ಳವನ ಮಾರ್ಗದಲ್ಲಿ ಮುಳ್ಳುಗಳೂ, ಉರುಲುಗಳೂ ತುಂಬಿವೆ, ತನ್ನನ್ನು ರಕ್ಷಿಸಿಕೊಳ್ಳುವವನು ಅವುಗಳಿಗೆ ದೂರವಾಗಿರುವನು.

6ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳನ್ನು ಶಿಕ್ಷಿಸು, ಮುಪ್ಪಿನಲ್ಲಿಯೂ ಓರೆಯಾಗರು.

7ಬಲ್ಲಿದನು ಬಡವನಿಗೆ ಒಡೆಯ, ಸಾಲಗಾರನು ಸಾಲಕೊಟ್ಟವನಿಗೆ ಸೇವಕ.

8ಕೆಟ್ಟತನವನ್ನು ಬಿತ್ತುವವನು ಕೇಡನ್ನೇ ಕೊಯ್ಯುವನು, ಹೆಮ್ಮೆಯಿಂದ ಹಿಡಿದ ದಂಡವು ಅವನ ಕೈಯಿಂದ ಬಿದ್ದುಹೋಗುವುದು.

9ದಯಾದೃಷ್ಟಿಯವನು ಆಶೀರ್ವಾದವನ್ನು ಪಡೆಯುವನು, ತನ್ನ ಆಹಾರವನ್ನು ಬಡವರಿಗೆ ಕೊಡುತ್ತಾನಲ್ಲವೆ.

10ಧರ್ಮನಿಂದಕನನ್ನು ಓಡಿಸಿಬಿಟ್ಟರೆ ಜಗಳವು ತೊಲಗುವುದು, ಹೌದು, ವ್ಯಾಜ್ಯವು ತೀರಿ ಅವಮಾನವು ಇಲ್ಲವಾಗುವುದು.

11ಹೃದಯಶುದ್ಧಿಯನ್ನು ಅಪೇಕ್ಷಿಸುವ ಮತ್ತು ಸವಿಮಾತನಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವುದು.

12ಯೆಹೋವನ ಕಣ್ಣು ತಿಳುವಳಿಕೆಗೆ ಕಾವಲು, ಆತನು ವಂಚಕನ ಮಾತುಗಳನ್ನು ಕೆಡವಿಬಿಡುವನು.

13<<ಹೊರಗೆ ಸಿಂಹವಿದೆ, ನನ್ನನ್ನು ಬೀದಿಯಲ್ಲಿ ಕೊಂದೀತು>> ಎಂಬುದು ಸೋಮಾರಿಯ ನೆವ.

14ಜಾರಸ್ತ್ರೀಯ ಬಾಯಿ ಆಳವಾದ ಹಳ್ಳ, ಯೆಹೋವನಿಗೆ ಸಿಟ್ಟನ್ನೆಬ್ಬಿಸಿದವನು ಅದರಲ್ಲಿ ಬೀಳುವನು.

15ಮೂರ್ಖತನವು ಮಕ್ಕಳ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವುದು.

16ಸ್ವಂತ ಲಾಭಕ್ಕಾಗಿ ಬಡವರನ್ನು ಹಿಂಸಿಸುವವನಿಗೂ, ಸಿರಿವಂತರಿಗೆ ಲಂಚಕೊಡುವವನಿಗೂ ಕೊರತೆಯೇ ಗತಿ.

17ಕಿವಿಗೊಟ್ಟು ಜ್ಞಾನಿಗಳ ಮಾತುಗಳನ್ನು ಕೇಳು, ನನ್ನ ಜ್ಞಾನಬೋಧೆಗೆ ಮನಸ್ಸು ಕೊಡು.

18ನೀನು ಆ ಮಾತುಗಳನ್ನು ಅಂತರಂಗದಲ್ಲಿ ಕಾಪಾಡುತ್ತಾ, ತುಟಿಗಳಲ್ಲಿ ಸಿದ್ಧಪಡಿಸಿಕೊಂಡಿದ್ದರೆ ಎಷ್ಟೋ ರಮ್ಯ.

19ನೀನು ಯೆಹೋವನಲ್ಲಿ ಭರವಸವಿಡಬೇಕೆಂದು, ಅವುಗಳನ್ನು ಈ ದಿನ ನಿನಗೇ ತಿಳಿಯಪಡಿಸಿದ್ದೇನೆ.

20ಸತ್ಯವಚನಗಳು ಎಷ್ಟೋ ಯಥಾರ್ಥವೆಂದು ನೀನು ತಿಳಿದುಕೊಂಡು, ನಿನ್ನನ್ನು ಕಳುಹಿಸಿದವರಿಗೆ ಸತ್ಯವಚನಗಳನ್ನೇ ಅರಿಕೆ ಮಾಡುವಂತೆ,

21ಸತ್ಯ, ತಿಳುವಳಿಕೆಯ ವಿಷಯವಾಗಿ ಇದಕ್ಕೆ ಮೊದಲೇ ನಿನಗಾಗಿ ಬರೆದಿರುವೆನಲ್ಲಾ.

22ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆ ಮಾಡಬೇಡ, ನ್ಯಾಯಸ್ಥಾನದಲ್ಲಿ ದರಿದ್ರರನ್ನು ತುಳಿಯಬೇಡ.

23ಯೆಹೋವನೇ ಅವರ ವ್ಯಾಜ್ಯವನ್ನು ನಡೆಸಿ, ಹಾಳುಮಾಡಿದವರ ಜೀವವನ್ನು ಹಾಳುಮಾಡುವನು.

24ಕೋಪಿಷ್ಠನ ಸಂಗಡ ಸ್ನೇಹ ಬೆಳಸಬೇಡ, ಸಿಟ್ಟುಗಾರನ ಸಹವಾಸ ಮಾಡಬೇಡ.

25ಮಾಡಿದರೆ ಅವನ ದುರ್ನಡತೆಯನ್ನು ಅನುಸರಿಸಿ, ನಿನ್ನ ಆತ್ಮವನ್ನು ಉರುಲಿಗೆ ಸಿಕ್ಕಿಸಿಕೊಳ್ಳುವಿ ನೋಡಿಕೋ.

26ಮಾತುಕೊಟ್ಟು ಸಾಲಕ್ಕೆ ಹೊಣೆಯಾಗುವವರಲ್ಲಿ, ನೀನೂ ಒಬ್ಬನಾಗಬೇಡ,

27ಆ ಸಾಲವನ್ನು ತೀರಿಸುವುದಕ್ಕೆ ನಿನ್ನಿಂದಾಗದಿರಲು, ಸಾಲಕೊಟ್ಟವನು ನಿನ್ನ ಕೆಳಗಿನ ಹಾಸಿಗೆಯನ್ನು ಕಿತ್ತುಹಾಕುವುದು ಬೇಕೇ?

28ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ ಮೇರೆಯನ್ನು ದಾಟಬೇಡ.

29ತನ್ನ ಕೆಲಸದಲ್ಲಿ ಚಾತುರ್ಯವುಳ್ಳವನನ್ನು ನೋಡು, ಇಂಥವನು ರಾಜರನ ಸನ್ನಿಧಿಯಲ್ಲಿ ನಿಲ್ಲುವನೇ ಹೊರತು, ಸಾಮಾನ್ಯ ಜನರ ಮುಂದೆ ಅಲ್ಲ.


  Share Facebook  |  Share Twitter

 <<  Proverbs 22 >> 


Bible2india.com
© 2010-2024
Help
Dual Panel

Laporan Masalah/Saran